ಡಿ.ಕೆ. ಶಿವಕುಮಾರ್ : ಹಿರಿಯೂರಿನ ಕೆಂಪೇಗೌಡ ಜಯಂತಿ ಕಾರ್ಯಕ್ರಮ. ನಾನು ನಿಮ್ಮ ಜೈಕಾರಕ್ಕಾಗಿ ಈ ಕಾರ್ಯಕ್ರಮಕ್ಕೆ ಬರಲಿಲ್ಲ.

ಹಿರಿಯೂರಿನ ಮಹಾಜನತೆ ಕೆಂಪೇಗೌಡರನ್ನು ಸ್ಮರಿಸಿ, ಅವರ ಉಪಕಾರ ಸ್ಮರಣೆ ಮಾಡುತ್ತಿದ್ದು, ನಿಮ್ಮ ಜತೆ ನಾನು ಇದ್ದೇನೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ. ನಮ್ಮದು ರೈತ ಜಾತಿ. ಇದು ವಿಶ್ವ ಜಾತಿ. ಇದು ಕೇವಲ ಒಂದು ಭಾಗಕ್ಕೆ ಸೇರಿದ್ದಲ್ಲ. ಅನ್ನದಾತ ವರ್ಗ ವಿಶ್ವದೆಲ್ಲೆಡೆ ಇದೆ. ಆದರೆ ಬೇರೆ ಬೇರೆ ಊರುಗಳಲ್ಲಿ ಬೇರೆ, ಬೇರೆ ರೀತಿ ಇದೆ ಅಷ್ಟೇ.
ಕೆಂಪೇಗೌಡರು ಬೆಂಗಳೂರು ನಗರ ಕಟ್ಟಿದ್ದಾರೆ. ಇವರು ರೈತ ಬೆಳೆದ ಬೆಳೆ ವ್ಯಾಪಾರಕ್ಕೆ ಸೇರಿದಂತೆ ಎಲ್ಲ ಸಮುದಾಯಗಳಿಗೆ ತಮ್ಮ ಕಸುಬು ಮಾಡಲು ಜಾಗ ಮಾಡಿಕೊಟ್ಟಿರುವ ಇತಿಹಾಸವನ್ನು ಯಾರೂ ಅಳಿಸಲಾಗುವುದಿಲ್ಲ. ಬಿಜೆಪಿ ಸರ್ಕಾರದವರು ಇತ್ತೀಚೆಗೆ ಕುವೆಂಪು, ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮಿ, ಶಿವಕುಮಾರಸ್ವಾಮಿ ಇತಿಹಾಸವನ್ನು ತಿದ್ದುವ ಪ್ರಯತ್ನ ಮಾಡಿದರು. ಅದು ಸಾಧ್ಯವಿಲ್ಲ.
ನಮಗೆ ವಿಶ್ವವೇ ಗಡಿ. ಸಮುದಾಯದ ಹಲವರು ವಿಜ್ಞಾನಿಗಳು, ಶಿಕ್ಷಕರು, ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೃಷಿಕ, ಶಿಕ್ಷಕ, ಸೈನಿಕ ಹಾಗೂ ಕಾರ್ಮಿಕ ವರ್ಗದ ಪಾತ್ರ ಸಮಾಜದ ಏಳಿಗೆಗೆ ಬಹಳ ಮಹತ್ವದ್ದಾಗಿದೆ. ಇಬ್ಬರೂ ಶ್ರೀಗಳು ದಿವ್ಯಸಾನ್ನಿಧ್ಯ ವಹಿಸಿದ್ದಾರೆ. ಬಾಲಗಂಗಾಧರ ಸ್ವಾಮೀಜಿಯವರ ಕಾಲದಲ್ಲಿ ಎಸ್.ಎಂ. ಕೃಷ್ಣ ಅವರು ಸಿಎಂ ಆಗಿದ್ದರು. 5 ಕೋಟಿ ಗಿಡ ನೆಡುವ ಐತಿಹಾಸಿಕ ಕಾರ್ಯಕ್ರಮ ಮಾಡಿದರು. ಈ ಸಮುದಾಯ ಎಲ್ಲ ವರ್ಗಕ್ಕೂ ಆಶ್ರಯ ಕೊಟ್ಟಿದೆ.
ಕೆಂಪೇಗೌಡರನ್ನು ಒಕ್ಕಲಿಗ ಸಮುದಾಯಕ್ಕೆ ಮಾತ್ರ ಸೀಮಿತವಾಗಿಸಬಾರದು, ಅವರು ಸರ್ವಜನಾಂಗದ ನಾಯಕರು. ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮಾಡುವ ಸಮಿತಿಯ ನೇತೃತ್ವವನ್ನು ನಾನು ವಹಿಸಿದ್ದೆ. ಈ ಕಾರ್ಯಕ್ರಮ ಆಚರಣೆ ದಿನಾಂಕ ನಿಗದಿ ಜವಾಬ್ದಾರಿಯನ್ನು ಶ್ರೀ ನಿರ್ಮಲಾನಂದ ಸ್ವಾಮೀಜಿಗಳಿಗೆ ಬಿಟ್ಟಿದ್ದೆವು. ಅವರು ದಿನಾಂಕ ನಿಗದಿ ಮಾಡಿದರು. ನಂತರ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾರ್ಯಕ್ರಮ ಆಚರಿಸಿಕೊಂಡು ಬರುತ್ತಿದ್ದೇವೆ.

ನಾವು, ನೀವೆಲ್ಲ ಯಾವ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟಿಲ್ಲ. ಸುಖದಿಂದ ಹಾಗೂ ದುಃಖದಿಂದ ಎರಡರಿಂದಲೂ ಕಣ್ಣೀರು ಬರುತ್ತದೆ. ಕಣ್ಣೀರು ಉಪ್ಪಾಗಿರುತ್ತದೆ, ರಕ್ತವೂ ಉಪ್ಪಾಗಿರುತ್ತದೆ, ಬೆವರು ಕೂಡ ಉಪ್ಪಾಗಿರುತ್ತದೆ. ಮೈಬಣ್ಣ ಏನೇ ಇರಲಿ, ರಕ್ತ, ಕಣ್ಣೀರು, ಬೆವರು ಮಾತ್ರ ಬದಲಾಗುವುದಿಲ್ಲ. ಅದಕ್ಕೆ ಕುವೆಂಪು ಅವರು ಎಲ್ಲರೂ ಒಂದೇ ಎಂಬ ವಿಶ್ವಮಾನವ ತತ್ವ ಸಾರಿದರು. ಬಿಜೆಪಿ ಸರ್ಕಾರದವರು ಅವರ ಬುಡಕ್ಕೇ ಕೈಹಾಕಿದ್ದರು. ಸಮಯ ಬರಲಿ, ನಾನು ಕುಮಾರಸ್ವಾಮಿ ಅವರು ಸೇರಿ, ಸಮಾಜದ ಇತಿಹಾಸ, ಬಸವಣ್ಣನವರಿಂದ ಹಿಡಿದು, ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ಎಂಬ ಸಂದೇಶದವರೆಗೆ ಎಲ್ಲವನ್ನೂ ರಕ್ಷಿಸುತ್ತೇವೆ.
ಸರ್ಕಾರ ಈ ಶಾಂತಿಯ ತೋಟ ಕದಡಲು ಕುತಂತ್ರ ಮಾಡುತ್ತಿದೆ. ಈ ಸರಕಾರಕ್ಕೆ ಸಾಮಾಜಿಕ ನ್ಯಾಯ ಒದಗಿಸಿಕೊಡಲು ಸಾಧ್ಯವಾಗಿಲ್ಲ ಎಂದು ನಮ್ಮ ಜನ ನೊಂದಿದ್ದಾರೆ. ಕೃಷಿಕ, ಅನ್ನದಾತನಾಗುವ ಭಾಗ್ಯ ನಮಗೆ ನಿಮಗೆ ಸಿಕ್ಕಿದೆ. ಅದೇ ರೀತಿ ಉಳಿದವರು ಬೇರೆ, ಬೇರೆ ಉದ್ಯೋಗದ ಮೂಲಕ ಗುರುತಿಸಿಕೊಂಡಿದ್ದಾರೆ. ಯಾರನ್ನೂ ಅಗೌರವದಿಂದ ಕಾಣಬಾರದು. ಎಲ್ಲ ಸಮಾಜಕ್ಕೂ ಅದರದೇ ಆದ ರೀತಿ, ರಿವಾಜು, ಪದ್ಧತಿ ಇದೆ.
ಕೆಂಪೇಗೌಡರು ಬೆಂಗಳೂರು ಕಟ್ಟದಿದ್ದರೆ, ಬೆಂಗಳೂರು ಈ ರಾಜ್ಯದ ರಾಜಧಾನಿ ಆಗದಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು ನೀವೇ ಊಹಿಸಿ. ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ಶಂಕುಸ್ಥಾಪನೆ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಆಗಮಿಸಿ, ಒಂದು ಮಾತು ಹೇಳಿದರು. ಒಂದು ಕಾಲದಲ್ಲಿ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ದೇಶದ ಇತರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಕಾಲ ಬದಲಾಗಿದೆ. ಈಗ ವಿಶ್ವದ ನಾಯಕರು ಮೊದಲು ಬೆಂಗಳೂರಿಗೆ ಬಂದು ನಂತರ ದೇಶದ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ. ವಿಧಾನಸೌಧವನ್ನು ಕೆಂಗಲ್ ಹನುಮಂತಯ್ಯ ಕಟ್ಟದಿದ್ದರೆ, ಕೃಷ್ಣ ಅವರು ವಿಕಾಸಸೌಧ, ಉದ್ಯೋಗ ಸೌಧ ಕಟ್ಟದಿದ್ದರೆ ಏನಾಗುತ್ತಿತ್ತು? ಅದೇ ರೀತಿ ಸುವರ್ಣಸೌಧ ಕಟ್ಟಿದ್ದು ಇತಿಹಾಸ. ಇದು ಒಂದು ಜಾತಿ ಧರ್ಮಕ್ಕೆ ಅನುಕೂಲವಾಗಲು ಮಾಡಿದ್ದಾ?
ನಮ್ಮ ಮಠವು ಎಲ್ಲ ಸಮುದಾಯದ ಮಕ್ಕಳಿಗೆ ಅಕ್ಷರ ಹಾಗೂ ಅನ್ನ ದಾಸೋಹ ಮಾಡುತ್ತಾ ಬಂದಿದೆ. ನಾವು ರಾಜಕಾರಣಿಗಳು ಎಷ್ಟು ಸಂತೋಷದಿಂದ ಇದ್ದೇವೆ ಎಂಬುದಕ್ಕಿಂತಲೂ ನಿಮ್ಮನ್ನು ಎಷ್ಟು ಸಂತೋಷದಿಂದ ಇಡುತ್ತೇವೆ ಎಂಬುದು ಮುಖ್ಯ. ನಿಮ್ಮ ಬದುಕಿನಲ್ಲಿ ಬದಲಾವಣೆಗೆ ತರಬೇಕು. ಆಗ ಮಾತ್ರ ಸಾರ್ಥಕತೆ ಸಿಗುತ್ತದೆ. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ, ಅರ್ಥವಿಲ್ಲದೆ ಬದುಕಿದರೆ ಬದುಕಿಗೆ ಅಪಮಾನ, ಅದೇ ರೀತಿ ನಮ್ಮ ನಾಯಕರು ಅವರವರ ಕಾಲದಲ್ಲಿ ಅವರದೇ ಆದ ಕೊಡುಗೆ ನೀಡಿದ್ದಾರೆ. ಅದಕ್ಕಾಗಿಯೇ ನಾವಿಂದು ಅವರನ್ನು ಸ್ಮರಿಸುತ್ತಿದ್ದೇವೆ.
ಯಾವುದೇ ಅಧಿಕಾರ ಶಾಶ್ವತವಲ್ಲ. ಅನೇಕ ಚಕ್ರವರ್ತಿಗಳೇ ಮಣ್ಣಾಗಿ ಹೋಗಿದ್ದಾರೆ. ಸೂರ್ಯನಿಗೂ ಭೂಮಿಗೂ ಸಂಬಂಧ ಹುಡುಕಿ ಸೋಲಾರ್ ಪಾರ್ಕ್ ಮಾಡಿದಾಗ ಅದರಲ್ಲಿ ಅಕ್ರಮ ಮಾಡಿದ್ದೇನೆ ಎಂದು ಎಲ್ಲವನ್ನೂ ಜಾಲಾಡಿದರು. 15 ಸಾವಿರ ಎಕರೆಯಲ್ಲಿ ಒಬ್ಬ ರೈತನ ಭೂಮಿಯನ್ನೂ ಸರ್ಕಾರ ವಶಪಡಿಸಿಕೊಳ್ಳದೇ, ಆ ರೈತರು ಆ ಜಮೀನಿನ ಮಾಲೀಕರಾಗಿ ಉಳಿದುಕೊಂಡು ವರ್ಷಕ್ಕೆ 24 ಸಾವಿರ ರೂ. ಅವರ ಮನೆ ಬಾಗಿಲಿಗೆ ಹೋಗುವಂತೆ ಮಾಡಿದ್ದೇನೆ. ವಿಶ್ವದ ಅತಿ ದೊಡ್ಡ ಸೋಲಾರ್ ಪಾರ್ಕ್ ರಚಿಸಿ ರೈತರಿಗೆ 7 ತಾಸು ವಿದ್ಯುತ್ ಪೂರೈಕೆಯಾಗುತ್ತಿದೆ. ಇದು ಸಾಧನೆ ಎಂದು ಹೇಳಿಕೊಳ್ಳುವುದಕ್ಕಿಂತ ನನಗೆ ಸಿಕ್ಕ ಅವಕಾಶದಲ್ಲಿ ಈ ಪ್ರಯತ್ನ ಮಾಡಿದ್ದೆ ಎನ್ನುತ್ತೇನೆ.
ನಮ್ಮ ಸಮುದಾಯದಿಂದ ಮಾನವ ಧರ್ಮಕ್ಕೆ ನೆರವಾಗುವ ಎಲ್ಲ ಕಾರ್ಯಕ್ರಮ ರೂಪಿಸಿಕೊಂಡು ಹೋಗೋಣ. ಅನ್ನದಾತ ಎಂಬ ಹೆಸರು ಸಿಕ್ಕಿರುವುದೇ ಭಾಗ್ಯ. ಎಲ್ಲರಿಗೂ ಒಕ್ಕಲುತನ ಮಾಡುವ ಭಾಗ್ಯ ಸಿಗುವುದಿಲ್ಲ. ಇದು ನಿಮ್ಮ ಭಾಗ್ಯ ಹಾಗೂ ಶಕ್ತಿ ಅಲ್ಲವೇ? ಇದನ್ನು ನಾವು ಒಗ್ಗಟ್ಟಾಗಿ ಉಳಿಸಿಕೊಂಡು ಹೋಗಬೇಕು. ಜತೆಗೆ ನಾಯಕರಾಗಿಯೂ ತಯಾರಾಗಬೇಕು.
ಮುಂದಿನ ದಿನಗಳಲ್ಲಿ ಬಹಳಷ್ಟು ಅವಕಾಶ ಸಿಗುತ್ತದೆ. ನಾನು ಎಲ್ಲವನ್ನು ನಿಮ್ಮ ವಿವೇಚನೆಗೆ ಬಿಡುತ್ತೇನೆ. ಬೆಳಕು ಮನೆ ಬಾಗಿಲಿಗೆ ಬರುತ್ತಿದೆ. ಬಾಗಿಲು ತೆಗೆದು ಬೆಳಕು ಹಾಗೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಿ ಎಂದು ಇಬ್ಬರೂ ಶ್ರೀಗಳಿಗೆ ಹೇಳಿದ್ದೇನೆ. ನಮ್ಮ ಮೇಲೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾವು ಉತ್ತಮ ಆಡಳಿತ ನೀಡಿ ಸಾಕ್ಷಿ ಗುಡ್ಡೆಗಳನ್ನು ನಿರ್ಮಿಸುವ ಛಲವಿದೆ. ಇದಕ್ಕೆ ನಿಮ್ಮ ಆಶೀರ್ವಾದವಿದೆ.
ಮೀಸಲಾತಿ ವಿಚಾರದಲ್ಲಿ ಹೆಚ್ಚು ಕಡಿಮೆ ಆಗಿದೆ. ಹಿಂದುಳಿದ ವರ್ಗಗಳ ವಿಚಾರದ ಪ್ರಸ್ತಾಪ ದೆಹಲಿಯಲ್ಲಿದೆ. ಮುಂದಿನ ದಿನಗಳಲ್ಲಿ ಶ್ರೀಗಳ ನೇತೃತ್ವದಲ್ಲಿ ಸಭೆ ಮಾಡಿ ಇದಕ್ಕೆ ಯಾವ ರೀತಿ ಧ್ವನಿ ನೀಡಬೇಕು ಎಂದು ತೀರ್ಮಾನಿಸುತ್ತೇವೆ. ಇಡೀ ಸಮುದಾಯಕ್ಕೆ ಆಗಿರುವ ನೋವನ್ನು ಚರ್ಚೆ ಮಾಡಬೇಕಿದೆ.
ಸಮುದಾಯದ ಎಲ್ಲ ನಾಯಕರನ್ನು ಈ ಭವ್ಯ ಕಾರ್ಯಕ್ರಮಕ್ಕೆ ಕರೆದು ಶಕ್ತಿ ತುಂಬಿದ್ದೀರಿ. ನಾನು ಆಗಾಗ್ಗೆ ಪುರಂದರದಾಸರ ಒಂದು ಮಾತನ್ನು ಹೇಳುತ್ತಿರುತ್ತೇನೆ. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಭನಾಭನ ಪಾದಭಜನೆ ಪರಮ ಸುಖವಯ್ಯ’. ಅದೇ ರೀತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.



