ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ.

ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮ ಪ್ರತಿಕ್ರಿಯೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದ್ದು, ಕರ್ನಾಟಕದ ಸ್ವಾಭಿಮಾನ ಉಳಿಸಲು ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದೆ. ಅಂದು ಬ್ರಿಟೀಷರ ವಿರುದ್ಧ ಹೋರಾಡಲು ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡ ಬೆಳಗಾವಿಯಿಂದ ನಾವು ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇವೆ. ಮಾ. 9 ರಂದು ಸರ್ಕಾರದ ಭ್ರಷ್ಟಾಚಾರ ಹಾಗೂ 40% ಕಮಿಷನ್ ವಿರುದ್ಧ ರಾಜ್ಯಾದ್ಯಂತ ಸಾಂಕೇತಿಕ ಬಂದ್ ಗೆ ಕಾಂಗ್ರೆಸ್ ಕರೆ ನೀಡಿದೆ. ಈ ಸರ್ಕಾರ ಕಮಿಷನ್ ಹಾಗೂ ಕಾಮಗಾರಿಗಳ ದುಪ್ಪಟ್ಟು ಅಂದಾಜು ಮೂಲಕ ಅಕ್ರಮವಾಗಿ ಅಲ್ಪಾವಧಿಯ ಟೆಂಡರ್ ಕರೆದು ಚುನಾವಣೆಗೂ ಮುನ್ನ ಗುತ್ತಿಗೆದಾರರಿಂದ ಎಷ್ಟು ಸಾಧ್ಯವೋ ಅಷ್ಟು ವಸೂಲಿಗೆ ಮುಂದಾಗಿದೆ. ಸಾವಿರ ಕೋಟಿಯ ಯೋಜನೆಗೆ ಎರಡು ಸಾವಿರ ಕೋಟಿ ರೂ. ಅಂದಾಜು ಮಾಡಲಾಗುತ್ತಿದೆ. ನಮ್ಮ ಕಾಲದಲ್ಲಿ ಬೆಳಗಾವಿ ಕಾಮಗಾರಿ 300 ಕೋಟಿ ಇದ್ದದ್ದು ಈಗ 900 ಕೋಟಿ ಅಂದಾಜಾಗಿದೆ. ಈ ಬಗ್ಗೆ ನಾವು ನಾನು, ಸಿದ್ದರಾಮಯ್ಯ ಹಾಗೂ ಹರಿಪ್ರಸಾದ್ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯುತ್ತೇವೆ. ಇನ್ನು ಸಿದ್ದರಾಮಯ್ಯ ಅವರ ಕಾಲದಲ್ಲಿ ಅತಿಥಿ ಸತ್ಕಾರದ ಹೆಸರಲ್ಲಿ ಅಕ್ರಮ ನಡೆದಿದೆ ಎಂದು ಹೇಳಿರುವ ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಯಾಕೆ ಧ್ವನಿ ಎತ್ತಲಿಲ್ಲ? ಕಳೆದ ಮೂರೂವರೆ ವರ್ಷಗಳಿಂದ ಸರ್ಕಾರ ಏನು ಮಾಡುತ್ತಿತ್ತು? ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದ್ದು, ಈಗ ಅವರು ಟ್ವೀಟ್ ಮಾಡಿದರೆ ಏನು ಪ್ರಯೋಜನ? ನನ್ನ ಮೇಲೂ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಯಾವ ಭ್ರಷ್ಟಾಚಾರದ ದಾಖಲೆ ಇದೆಯೋ ಅದನ್ನು ಇಟ್ಟುಕೊಂಡು ತನಿಖೆ ಮಾಡಿಸಲಿ. ನಾನು ನೇಮಕಾತಿ, ಉಪಕರಣ ಖರೀದಿ ಅಥವಾ ಇತರ ಯಾವುದೇ ವಿಚಾರದಲ್ಲಿ ಅಕ್ರಮ ಮಾಡಿದ್ದರೆ ತನಿಖೆ ಮಾಡಿಸಿ. ಅದನ್ನು ಎದುರಿಸಲು ಸಿದ್ಧನಿದ್ದೇನೆ. ನಮ್ಮ ಅವಧಿಯಲ್ಲಿ ಇಂಧನ ಇಲಾಖೆ ಹೇಗಿತ್ತು, ಈಗ ಸಿಎಜಿ ವರದಿಯಲ್ಲಿ ಏನಿದೆ? ಎಂಬುದು ಗೊತ್ತಿದೆ. ಈ ವಿಚಾರಗಳ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ವಿರೂಪಾಕ್ಷಪ್ಪ ಅವರ ಮೇಲಿನ ದೂರು ನಾವು ತಪ್ಪಿಸಬಹುದಿತ್ತು, ಆದರೆ ಆ ರೀತಿ ಮಾಡಿಲ್ಲ ಎಂಬ ಪ್ರಹ್ಲಾದ್ ಜೋಶಿ ಹೇಳಿಕೆ ಬಗ್ಗೆ ಕೇಳಿದಾಗ, ‘ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆ. ಅವರ ಮಾತಿನ ಪ್ರಕಾರ ಮನಸ್ಸು ಮಾಡಿದ್ದರೆ ಕೇಸ್ತಡೆಯಬಹುದಾಗಿತ್ತು ಎನ್ನುವುದಾದರೆ ಇವರು ಲೋಕಾಯುಕ್ತ ಸಂಸ್ಥೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರಾ? ತನಿಖಾ ಸಂಸ್ಥೆಗಳು ಅವರ ನಿಯಂತ್ರಣದಲ್ಲಿ ಇವೆಯೇ? ಲೋಕಾಯುಕ್ತ ಸಂಸ್ಥೆ ತಮ್ಮ ನಿಯಂತ್ರಣದಲ್ಲಿದೆ ಎಂದು ಅವರು ಭಾವಿಸಿದ್ದರೆ ಅದು ಅವರ ಭ್ರಮೆ. ಅವರು ಬೇರೆ ಪ್ರಕರಣಗಳಲ್ಲಿ ಬಿ ರಿಪೋರ್ಟ್ ಬರೆಸಿದಂತೆ ಈ ಪ್ರಕರಣದಲ್ಲಿ ಬರೆಸಲಿ ನೋಡೋಣ. ಲೋಕಾಯುಕ್ತ ವ್ಯವಸ್ಥೆ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲೇ ಜಾರಿಗೆ ಬಂದಿತ್ತು. ಈ ಬಿಜೆಪಿಯವರೇನು ಬಂದು ಲೋಕಾಯುಕ್ತ ಸಂಸ್ಥೆ ಹುಟ್ಟುಹಾಕಿಲ್ಲ’ ಎಂದು ಟೀಕಿಸಿದರು. ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಶ್ರೇಯಸ್ಸು ಯಾರಿಗೆ ಸಲ್ಲಬೇಕು ಎಂದು ಕೇಳಿದಾಗ, ‘ಈ ಹೆದ್ದಾರಿಗೆ ಅನುಮತಿ ನೀಡಿದ್ದು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಅವರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗಿತ್ತು. ಈ ಹೆದ್ದಾರಿಗೆ ಸರ್ವೀಸ್ ರಸ್ತೆ ಮಾಡಬೇಕಿದ್ದು, ಅದನ್ನು ಮಾಡಲಿ. ಹಳ್ಳಿ ಜನ ಈ ಕಡೆಯಿಂದ ಆ ಕಡೆಗೆ ಹೋಗಲು 15-20 ಕಿ.ಮೀ ಸಂಚಾರ ಮಾಡಬೇಕಿದೆ. ಈ ಸರ್ವೀಸ್ ರಸ್ತೆ ಮಾಡಿಸಿ ನಂತರ ಟೋಲ್ ಸಂಗ್ರಹಿಸಲಿ. ಈ ರಸ್ತೆಯ ಗುಣಮಟ್ಟ ಉತ್ತಮವಾಗಿಲ್ಲ. ಪ್ರಧಾನಿಗಳಿಂದ ಉದ್ಘಾಟನೆ ಮಾಡಿಸಿ ರೋಡ್ ಶೋ ಮಾಡಲು ತರಾತುರಿಯಲ್ಲಿ ರಸ್ತೆ ಮಾಡಲಾಗಿದೆ. ಬೆಂಗಳೂರು ಬಿಟ್ಟರೆ ಮೈಸೂರು ತಲುಪುವವರೆಗೂ ಎಲ್ಲೂ ವಿಶ್ರಾಂತಿಗೆ ಅವಕಾಶವಿಲ್ಲ. ಮಧುಮೇಹ ಸಮಸ್ಯೆ ಇರುವವರ ಗತಿ ಏನು? ರಾಮನಗರ, ಮಂಡ್ಯ, ಚನ್ನಪಟ್ಟಣ, ಮದ್ದೂರಿನ ಹೊಟೇಲ್ ವ್ಯಾಪಾರಸ್ಥರನ್ನು ನಾಶ ಮಾಡಲಾಗಿದೆ’ ಎಂದರು. ಮಾ.9 ರಂದು ದ್ವಿತೀಯ ಪಿಯುಸಿ ಮೊದಲ ಪರೀಕ್ಷೆ ಇದ್ದು, ಬಂದ್ ಕರೆದಿರುವ ಬಗ್ಗೆ ಕೇಳಿದಾಗ, ‘ನಾವು ದ್ವಿತೀಯ ಪಿಯುಸಿ ಪರೀಕ್ಷೆ, ಶೈಕ್ಷಣಿಕ ಸಂಸ್ಥೆಗಳು, ಸಾರಿಗೆ ಹಾಗೂ ಆಸ್ಪತ್ರೆ ಸೇವೆಗಳಿಗೆ ಅಡ್ಡಿಪಡಿಸುವುದಿಲ್ಲ. ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಕೇವಲ ವ್ಯಾಪಾರ ವಹಿವಾಟಗಳನ್ನು 2 ಗಂಟೆಗಳ ಕಾಲ ಬಂದ್ ಮಾಡಿ ಭ್ರಷ್ಟ ಸರ್ಕಾರ ಕಿತ್ತೊಗೆಯಲು ಸಹಕಾರ ನೀಡಿ ಎಂದು ಮನವಿ ಮಾಡಿದ್ದೇವೆ’ ಎಂದರು. ಸಚಿವ ನಾರಾಯಣಗೌಡರ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಕೆ.ಆರ್ ಪೇಟೆಯಲ್ಲಿ ಗಲಾಟೆ ನಡೆದಿರುವ ಬಗ್ಗೆ ಕೇಳಿದಾಗ, ‘ನಾರಾಯಣ ಗೌಡರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ನಮ್ಮ ಜತೆ ಮಾತನಾಡಿಲ್ಲ. ಯಾರು ಯಾರ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗೊತ್ತಿದೆ. ನಮ್ಮ ಪಕ್ಷದಲ್ಲಿನ ಗೊಂದಲ ನಾವು ಸರಿಪಡಿಸಿಕೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದರು. ಸಚಿವ ಸೋಮಣ್ಣ ಕಾಂಗ್ರೆಸ್ ಸೇರುವ ಮಾತುಕತೆ ನಡೆಸಿದ್ದಾರಾ ಎಂಬ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೋಮಣ್ಣ ಅವರು ನಮ್ಮ ಜತೆ ಈ ವಿಚಾರವಾಗಿ ಮಾತನಾಡಿಲ್ಲ. ಕನಕಪುರದಲ್ಲಿ ವಸತಿ ಸಚಿವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ಪತ್ರ ಬರೆದಿದ್ದಾರೆ. ಸಮಯ ನೋಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಯತ್ನಿಸುತ್ತೇನೆ’ ಎಂದರು. ಪಕ್ಷ ಬಿಟ್ಟು ಹೋದವರಲ್ಲಿ ಬಹುತೇಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಕುಮಾರಸ್ವಾಮಿ ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ನಮ್ಮ ನಾಯಕತ್ವ ಒಪ್ಪಿ ಪಕ್ಷಕ್ಕೆ ವಾಪಸ್ ಬರುವುದಾದರೆ ನಂತರ ಚರ್ಚೆ ಮಾಡೋಣ’ ಎಂದರು.

Leave a Reply

Your email address will not be published. Required fields are marked *